Sunday, December 23, 2007

ಸ್ಟಿಕ್ಕರ್ ಹಚ್ಚಿದ ಹಣ್ಣುಗಳು

ಮೊದಲ ಬಾರಿ ಬೆಣ್ಣೆ ಹಣ್ಣಿನ ಗಿಡ ನೋಡಿದಾಗ, ನನಗೆ ಆರೋ,ಏಳೋ ವಯಸ್ಸು.ಅಮ್ಮ ಅಮ್ಮಚ್ಚಿಯಿಂದಲೋ,ಹಳೆಮನೆಯಿಂದಲೋ ಆ ಗಿಡವನ್ನು ಮುಚ್ಚಟೆಯಲ್ಲಿಟ್ಟುಕೊಂಡು ತಂದಿದ್ದಳು.ಹಸಿರಾದ ಉದ್ದನೆಯ ಎಲೆಗಳು,ಚಿಕ್ಕದಾದರೂ ಬಲಿಷ್ಠವಾದ ಕಾಂಡ,ಅದರ ಒಟ್ಟಾರೆ ಆಕಾರ ನನ್ನಲ್ಲಿ ಅದಮ್ಯ ಕುತೂಹಲಕ್ಕೆ ಎಡೆ ಇತ್ತಿತು.ಅದರ ಮೇಲೆ,ಹಣ್ಣಿನ ರುಚಿ,ಬಣ್ಣ,ಮ್ರದುತನದ ಬಗ್ಗೆ ಅಮ್ಮನದು ಮುಗಿಯದ ವರ್ಣನೆ."ಮೊದ್ಲೆಲ್ಲ ಕಾನ್ಗೀನಲ್ಲೆಲ್ಲ ಸೊಕಾಗಿ ಬೆಳ್ಯದು,ಈಗಾ ಔಷಧಿಗೆ ಬೇಕೂ ಅಂದ್ರೂ ಸಿಗ್ತಿಲ್ಲೆ" ಅಂತ ಅಮ್ಮ ಹೇಳಿದ ಮೇಲಂತೂ ಒಂದು ಭಾರಿ ನಿಧಿ ಸಿಕ್ಕ ಖುಷಿ ನನಗೆ.

ಮರುದಿನ ಭಾನುವಾರ ಅಪ್ಪಯ್ಯನ ಜೊತೆಗೂಡಿ,ವಿಚಿತ್ರ ಸಂಭ್ರಮದಿಂದ ಗಿಡವನ್ನು ನೆಟ್ಟಿದ್ದೂ ಆಗಿ ಹೋಯಿತು.ದಿನೇ ದಿನೇ ಆ ಗಿಡವೂ ಸಹಾ ನನ್ನಂತೆಯೇ ಬೆಳೆಯಲಾರಂಭಿಸಿತು.ಅಲ್ಲಿಯ ತನಕ ನನ್ನ ತುಂಟಾಟಕ್ಕೋ,ಕಾಲ್ತುಳಿತಕ್ಕೋ,ಚೆಂಡಿನ ಅಬ್ಬರಕ್ಕೋ ಸಿಲುಕಿ ಪಕಳೆ ಉದುರಿಸಿಕೊಂಡು ನಿಂತ ಹೂಗಿಡಗಳಿಗೆಲ್ಲ ಈ ಬೆಣ್ಣೆಹಣ್ಣಿನ ಗಿಡವನ್ನು ಕಂಡರೆ ಸವತಿ ಮತ್ಸರ.ನನಗೋ ಅದು ಯಾವಾಗ ಹಣ್ಣು ಬಿಟ್ಟೀತೆಂಬ ಕಾತುರ.ಹೀಗೆ ಒಬ್ಬರಿಗೊಬ್ಬರು ಸ್ಪರ್ಧಿಗಳಂತೆ,ನಾನು ಮತ್ತು ನನ್ನ ಬೆಣ್ಣೆಹಣ್ಣಿನ ಗಿಡ ಬೆಳೆಯುತ್ತಲೇ ಹೋದೆವು.

ಆವತ್ತು ಅಪ್ಪಯ್ಯನಿಗೆ ಭಾರೀ ಖುಷಿ;"ನಮ್ಮನೆ ಮಾಣಿಗೆ ಬೆಂಗಳೂರ್ ಕಾಲೇಜ್ನಲ್ಲಿ ಸೀಟ್ ಸಿಕ್ಕಿದ್ದು,ಅವನೂ ಇನ್ಮುಂದೆ ಇಂಜಿನ್ದಾರ ಆಪವ್ನೆಯ ಗೊತ್ತಿದ್ದ",ಎಂದು ಅಮ್ಮನ ಬಳಿ ಹೇಳುತ್ತಿದ್ದ.ಆದರೆ ನನ್ನ ಸಂಭ್ರಮಕ್ಕೆ ಕಾರಣ ಬೇರೆಯೇ ಇತ್ತು.ಇತ್ತೀಚೆಗಷ್ಟೆ ಗೊಡ್ಡು ಗಿಡವೆಂದು ತಿರಸ್ಕರಿಸಲ್ಪಟ್ಟಿದ್ದ ಬೆಣ್ಣೆಹಣ್ಣಿನ ಗಿಡದಲ್ಲಿ ನಾನು ಹೂವನ್ನು,ಚಿಕ್ಕ ಹೀಚುಗಾಯಿಯಂತಹದೇನನ್ನೋ ಆ ದಿನ ಕಂಡಿದ್ದೆ. ಬೆಣ್ಣೆಹಣ್ಣು ತಿನ್ನುವ ಅದೃಷ್ಟ ನನಗೆ ಕಡೆಗೂ ಕೂಡಿ ಬರಲಿಲ್ಲ.ಆದರ ನೆನಪಿನೊಂದಿಗೆ ಬೆಂಗಳೂರಿಗೆ ಹೋಗುವ ಬಸ್ಸನ್ನೇರಿ ಕುಳಿತವನ ಬಳಿ ಬಂದು ಅಪ್ಪಯ್ಯ ಹೇಳಿದ್ದ"ಮಾಣಿ,ಬೇಜಾರಾಗಡ,ಹಣ್ಣಾದ್ಕೂಡ್ಲೆ ನಿಂಗೆ ನಾನೇ ಪಾರ್ಸಲ್ ಮಾಡಿ ಕಳ್ಸ್ಗೊಟ್ಟರೆ ಆತ ಇಲ್ಯ?".

ಹೀಗೆ ಬೆಣ್ಣೆಹಣ್ಣಿನ ನೆನಪು ಬೆಂದಕಾಳೂರ ಬಾಲೆಯರ ನಡುವೆ ಮಾಸಿ ಹೋಗುತ್ತಿರಲು,ಒಂದು ದಿನ ಅಪ್ಪಯ್ಯನಿಂದ ಫೋನು ಬಂತು.ಎಲ್ಲ ಕುಶಲ,ಕ್ಷೇಮ ಸಮಾಚಾರಗಳಾದೊಡನೆ,ಅಪ್ಪಯ್ಯ ಹೇಳ್ದ "ಮಾಣಿ,ಒಂದ,ಎರಡ ಕಾಯಷ್ಟೆ ಕಚ್ಗಂಡಿತ್ತು ಮಾರಾಯ;ಮೊನ್ನೆ ಯಾರೋ ಕಲ್ಲು ಹೊಡ್ದು ಅದನ್ನು ಇಲ್ಲೆ ಮಾಡಿಗಿದ.ಆ ಮ್ಯಾಲಿನ್ ಮನೆ ಸಾಬರ ಹುಡ್ಗನ್ದೆ ಕೆಲ್ಸ ಅದು.ಕೆರೆ ಬದಿಗೆ ಹೋಗಕಾದ್ರೆ ಕೈ ಸುಮ್ನಿರ್ತಿಲ್ಲೆ ಕಾಣ್ತು.ಮತ್ಯಾರು ಬತ್ತ ಇಲ್ಲಿ?"

ನನ್ನ ಸ್ನೇಹಿತರ,ಸೆಮೆಸ್ಟರ್ ಗಳ,ಇಂಟರ್ನಲ್ ಗಳ ಗದ್ದಲದಲ್ಲಿ ನಾಲ್ಕನೆ ಸೆಮೆಸ್ಟರನ್ನು ನಾನು ತಲುಪಿಬಿಟ್ಟಿದ್ದೆ.ಬೆಣ್ಣೆಹಣ್ಣಿನ ಗಿಡದ ನೆನಪೂ ನಿಧಾನವಾಗಿ ಮರೆಯಾಗುತ್ತಿತ್ತು. ಆಕ್ಕನ ಮದುವೆಗೆಂದು ಮನೆಗೆ ಬಂದವನಿಗೆ ಎನೋ ಬದಲಾದಂತೆ ಭಾಸ.ಮದುವೆಯ ಸಂಭ್ರಮ,ಅದಕ್ಕೆಂದೆ ಹಾಕಿದ್ದ ದೊಡ್ಡ ಚಪ್ಪರ,ಇವೆಲ್ಲವುಗಳ ನಡುವೆಯೂ ಎನೋ ಅಸಮಧಾನ.ಆಸ್ರಿ ಕುಡಿದು,ಸುಮ್ಮನೆ ಹಿತ್ತಿಲ ಕಡೆ ಹೋದವನಿಗೆ ಕಂಡಿದ್ದು,ತನ್ನ ರೆಂಬೆ-ಕೊಂಬೆಗಳನ್ನೆಲ್ಲ ಕಳೆದುಕೊಂಡು,ಬೆಸ್ಕಾಮ್ ನ ಕ್ರಪೆಗೆ ಪಾತ್ರವಾದಂತೆ ತೋರುತ್ತಿದ್ದ,ನನ್ನ ಪ್ರೀತಿಯ ಬೆಣ್ಣೆಹಣ್ಣಿನ ಗಿಡ..ಆಲ್ಲಲ್ಲ ಮರ.ಆ ಮದುವೆಯ ಗಲಾಟೆಯಲ್ಲೇ ಅಪ್ಪಯ್ಯನನ್ನು ಕೇಳಿದಾಗ,ಆಪ್ಪಯ್ಯ"ಮತ್ತೆಂತ ಮಾಡಲಾಗ್ತ ಮಾಣಿ?ಇಷ್ಟು ವರ್ಷಾತು,ಒಳ್ಳೇ ರಾಕ್ಷಸನಾಂಗೆ ಬೆಳೆದಿತ್ತು.ಒಂದು ದಿವ್ಸಾ ಹೇಳಿ ನೀರ್ ತಪ್ಸಿದ್ನಿಲ್ಲೆ.ನಿನ್ನ ಅಮ್ಮ ಮಾಡಿದ್ ವಾಗತಿ ಅಂತೂ ನಿಂಗೇ ಗೊತ್ತಿದ್ದು.ಇಷ್ಟೆಲ್ಲ ಮಾಡಿದ್ರೂ, ಒಂದು ನಾಲ್ಕು ಹೂಗ್ ಸಹಿತಾ ಕಚ್ಗತ್ತಿಲ್ಲೆ ಅಂದ್ರೆ,ಚೊಲೊ ಜಾತಿದೇ ಅಲ್ಲಾ ಕಾಣ್ತ ಅದು.ಬೇಜಾರಾಗಿ,ಬೇರೆ ಗಿಡಕ್ಕೂ ಗೊಳಲಾಗ್ತು,ಚಪ್ಪರಾನೂ ಸರಿ ಹಾಕಲಾಗ್ತಿಲ್ಲೆ ಹೇಳಿ ಮೊನ್ನೆ ಮಂಜನ ಕೈಲಿ ಹೇಳಿ ಸವರ್ಸಿ ಹಾಕ್ದೆ ಅಂದ".ಆಪ್ಪಯ್ಯನ ಮಾತುಗಳಲ್ಲಿನ ವಾಸ್ತವತೆಯನ್ನು ಜೀರ್ಣಿಸಿಕೊಳ್ಳುವದು ಕಷ್ಟವೆನಿಸಿತು.

ಮದುವೆಯೂ,ಅದರ ಸಂಭ್ರಮವೂ ಮುಗಿದ ಬೆನ್ನಿನಲ್ಲೇ,ನನಗೂ ಸಹಾ ಯಾವುದೊ ಇಂಟರ್ನಲ್ಲೋ,ಎಕ್ಸಾಮೋ ಕಾಯುತ್ತಿತ್ತು,ಭಾರವಾದ ಮನಸ್ಸಿನೊಂದಿಗೆ,ಹಗುರವಾದ ತೊಡದೇವಿನೊಂದಿಗೆ ಮೆಜೆಸ್ಟಿಕ್ ಗೆ ಬಂದಿಳಿದೆ.ಹೀಗೊಂದು ಭಾನುವಾರ, ಪಕ್ಷಿಪ್ರೇಮಿಯಾದ ನಾನು, ಸಹಭಿರುಚಿಯ ಸ್ನೆಹಿತನೊಂದಿಗೆ ಎಂ.ಜಿ.ರೋಡ್,ಬ್ರಿಗೇಡ್ ನೆಲ್ಲ ಸುತ್ತಿ,ಸಾಯಂಕಾಲದ ಆಹ್ಲಾದಕರ ವಾತಾವರಣವನ್ನು ಸವಿಯುತ್ತ, ಬುಲ್ ಟೆಂಪಲ್ಲಿನ ಹಿಂದಿರುವ ಪಕ್ಶಿಧಾಮದಲ್ಲಿ ವಿಹರಿಸಿ,ರಾಮಾಂಜನೇಯರಿಗೆ ವಂದನೆ ಸಲ್ಲಿಸಿ ರೂಮನ್ನು ತಲುಪಿದಾಗ ಅಜಮಾಸು ಹತ್ತು ಗಂಟೆ.ಆದೆಲ್ಲಿಂದಲೊ ಅಣ್ಣ ಪಾರ್ಸೆಲ್ ತಂದಿದ್ದ ಜ್ಯೂಸನ್ನು ಕುಡಿದವನಿಗೆ ಎನೋ ಆಹ್ಲಾದ,ಎಲ್ಲೋ ಆಘ್ರಾಣಿಸಿದ ಪರಿಮಳ.ಅಣ್ಣನನ್ನು ಅದು ಯಾವ ಜ್ಯೂಸೆಂದು ಕೇಳಿದರೆ ಸಮಂಜಸ ಉತ್ತರ ದೊರಕಲಿಲ್ಲ.ಇದೆಲ್ಲದರ ನಡುವೆ ಇಂಟರ್ನಲ್ಲುಗಳು,ಎಕ್ಸಾಮುಗಳು,ಪ್ರಾಜೆಕ್ಟುಗಳು ನಿಲ್ಲದ ಭೇದಿಯಂತೆ ಒಂದೇ ಸಮನೆ ನನ್ನನ್ನು ಆರನೆ ವರ್ಷಾರ್ಧದ ಅಂತ್ಯಕ್ಕೆ ತಂದು ನಿಲ್ಲಿಸಿದ್ದವು.ಪರೀಕ್ಷೆಗಳೆಲ್ಲವೂ ಮುಗಿದೂ,ಯಾವುದೋ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಗುವ ಭರವಸೆಯೊಂದಿಗೆ,ಸಂಭ್ರಮದಿಂದಲೆ ಊರನ್ನು ಸೇರಿದ್ದೆ.

ಆಪ್ಪಯ್ಯ,ಆಯಿಗೋ ಹೇಳತೀರದ ಸಡಗರ.ಆಯಿಗೆ ಆ ಕಂಪನಿಯ ಹೆಸರನ್ನು ಹೇಳುವಂತೆ ಮಾಡಲು ಇಡೀ ದಿನ ಹೆಣಗಿಬಿಟ್ಟಿದ್ದೆ.ಬೆಳಿಗ್ಗೆ, ದೋಸೆಯನ್ನು ತುಪ್ಪ-ಬೆಲ್ಲದ ಕಾಂಬಿನೇಷನ್ನಿನ ಜೊತೆಗೆ ತಿನ್ನುತ್ತಿದ್ದವನಿಗೆ ಕಾಣಿಸಿದ್ದು ಅದೇ ಬೆಣ್ಣೆಹಣ್ಣಿನ ಮರ."ಅರೆ!!ಎಷ್ಟೆತ್ತರ ಹೋಗಿಬಿಟ್ಟಿದೆ ಇದು?ಆದೂ ಯಾವುದೆ ರೆಂಬೆ-ಕೊಂಬೆ,ಟಿಸಿಲುಗಳಿಲ್ಲದೇ?ಕೇವಲ ಎತ್ತರ ಬೆಳೆಯುವುದೊಂದೇ ತನ್ನ ಧ್ಯೇಯವೋ ಎಂಬಂತೆ.ಈ ಗಿಡಕ್ಕೆ ಮಾತ್ರ ಈ ಪರಿ ಬೆಳೆಯುವ ಹುಚ್ಚು ಹೇಗೆ ಬಂತು?ಆಬ್ಬಬ್ಬಾ ಇದರ ಜಂಭವೆ?"ಎಂದುಕೊಳ್ಳುತ್ತಿರಲು,ಅಪ್ಪಯ್ಯ ಅಂದ"ನೋಡು ಮಾಣಿ,ಆ ಮರವ,ಯಾನಮ್ನಿ ಬೆಳ್ದು ನಿಂತಿದ್ದು ಹೇಳಿ.ಈಗ ಒಂದೂವರೆ-ಎರಡು ವರ್ಷಾಗ್ತಾ ಬಂದೋತು,ನನಗೂ ಎಂತೂ ವಾಗತಿ ಮಾಡಲೆ ಆಗ್ತಾನೂ ಇಲ್ಲೆ.ನೋಡ್ದವೆಲ್ಲಾ ಅದನ್ನೆ ಹೆಳ್ತ,ಅದ್ಯಾನಮ್ನಿ ಬೆಳ್ದು ನಿಂತಿದ್ದು ಆ ಗಿಡ,ಪೇಪರ್ನಲ್ಲಾದ್ರೂ ಕೊಡ್ಲಕ್ಕಾಯಿತ್ತು ಹೇಳಿ.ನಂಗೆ ಅದನ್ನ ಕಡಿಯಲೂ ಮನಸ್ಸು ಬತ್ತಿಲ್ಲೆ,ಎಷ್ಟಂದ್ರೂ ಕೈಯಾರೆ ನೆಟ್ಟಿದ್ದಲ್ದ?ಮೊನ್ನೇ ಎಲ್ಲೊ ಒನ್ದೆರಡು ಕಾಯಿ ಕಚ್ಗಂಡಾಂಗೆ ಕಂಡಿತ್ತಪ,ಅದಿನ್ನು ಹಕ್ಕಿ-ಪಿಕ್ಕಿ ಪಾಲಾಗೆ ಹೋಗವ ಎನ?ಹತ್ತಲೆಲ್ಲ ಆಗ್ತಿಲ್ಯ ಮಾಣಿ,ಭಾರಿ ಸುಟಿ ಈ ಮರ".ಅಪ್ಪಯ್ಯನ ಇಳಿ ಬಿದ್ದ್ಡ ಸುಕ್ಕು ಮುಖದ ಗೆರೆಗಳಲ್ಲಿ,ಎನೋ ಸಂತ್ರಪ್ತಿ ಭಾವ.

ಮರು ಪ್ರಯಾಣದ ಸಿಧ್ಧತೆಯಲ್ಲಿದ್ದಾಗ,ಆಯಿಯದೊಂದೆ ವರಾತ:"ಎಂತದ ಈ ನಮ್ನಿ ಮಾಡ್ತೆ?ಮೊದ್ಲೆಲ್ಲ ಎರ್ಡು ತಿಂಗ್ಳಿಗೊಂದ್ಸಲಾ ಆದ್ರು ಬತ್ತಿದ್ದೆ,ಈಗಂತೂ ಬರದೂ ಆರ-ಎಳ ತಿಂಗ್ಳಿಗೊಂದ್ಸಲಾ,ಅದೂ ಮೂರ-ನಾಲ್ಕ ದಿನಕ್ಕೆ ಗಂಟೂ-ಮೂಟೆ ಕಟ್ಟಿ ಬಿಡ್ತೆ.ಎಂತಾ ಹುಗ್ದಿಟ್ಟಿದ್ದೆ,ಬೆಂಗಳೂರಲ್ಲಿ?".ಅಂತೂ ಆಯಿಯನ್ನು ಸಮಾಧಾನಿಸಿ ಹಿಂತಿರುಗಿ ಬಂದದ್ದಾಯಿತು.

ಮತ್ತೆ ಯಥಾಪ್ರಕಾರ ಏಳನೇ ಸೆಮೆಸ್ಟರಿಗೆ ಪಾದಾರ್ಪಣೆ.ಆವತ್ತೊಂದು ದಿನ ಎಂದಿನಂತೆ ಕಾಲೇಜು ಮುಗಿಸಿ,ಬಿ.ಟಿ.ಸ್ ನಲ್ಲಿ ನನ್ನ ಕಸರತ್ತು ಪ್ರದರ್ಶಿಸುವ ಮೊದಲು ಜ್ಯೂಸ್ ಕುಡಿಯಬೇಕೆಂದೆನಿಸಿ ಅಲ್ಲೆ ಹತ್ತಿರವಿದ್ದ ಅಂಗಡಿ ಹೊಕ್ಕೆ."ರಸಸಾಗರ" ಎನ್ನುವುದು ಅದರ ಹೆಸರಾದರೂ,"ನೊಣಸಾಗರ" ಎಂಬ ಅನ್ವರ್ಥಕ ನಾಮದಿಂದ ಪ್ರಸಿದ್ದಿ ಪಡೆದಿತ್ತು.ಪ್ರಿನ್ಸಿಪಾಲರ ಕಟ್ಟಪ್ಪಣೆಯ ಮೇರೆಗೆ ಕತ್ತಿನಲ್ಲಿ ನೇತಾಡುತ್ತಿದ್ದ ಪಟ್ಟಿಗೆ ಇನ್ನೂ ಬಿಡುಗಡೆ ಸಿಕ್ಕಿರಲಿಲ್ಲ.ದರಪಟ್ಟಿಯ ಮೇಲೆ ಕಣ್ಣು ಹಾಯಿಸುತ್ತಿದ್ದಾಗ, ಮೊದಲ ಗಮನ ಲೈಮ್ ಜ್ಯೂಸಿನ ಮೇಲೆ ಹೋಯಿತಾದರೂ,ತೀರ ಜ್ಯೂಸ್ ಅಂಗಡಿಯಲ್ಲಿ ಕಂಜೂಸ್ ಆಗಬಾರದೆಂದು,ನಿರ್ಲಕ್ಷಿಸಿದೆ.ಹಾಗೇ ಹೊಸದ್ಯಾವ್ದಾದ್ರು ಜ್ಯೂಸ್ ಕುಡಿಯೋಣವೆಂದು ಯೋಚಿಸುತ್ತಿದ್ದವನಿಗೆ ಕಂಡಿದ್ದು "ಬಟರ್ ಫ್ರೂಟ್ ಮಿಲ್ಕ್ ಷೇಕ್". ಅದನ್ನೇ ಕೊಡಪ್ಪಾ ಎಂದು ಅಂಗಡಿಯಾತನಿಗೆ ಹೇಳಿ ರಸ್ತೆ ಕಡೆ ಕಣ್ಣಾಡಿಸುತ್ತಿದ್ದವನ ದೃಷ್ಟಿ,ಅಲ್ಲೇ ಪಕ್ಕದಲ್ಲಿದ್ದ ಹಣ್ಣಿನ ರಾಶಿಯ ಮೇಲೆ ಹೋಯಿತು.ಹಸಿರು,ನಸು ಹಳದಿ ಬಣ್ಣದ ಅದನ್ನು ಹಣ್ಣೋ?ತರಕಾರಿಯೋ? ನಿರ್ಧರಿಸಲಾಗದೆ ಅಂಗಡಿಯಾತನನ್ನು ಕೇಳಿದೆ,ಏನಪ್ಪಾ ಅದು ಅಂತ?"ಅದು ಬಟರ್ ಫ್ರೂಟು ಸಾ..ಅಂಗಂದ್ರೆ "ಬೆಣ್ಣೆಹಣ್ಣೂ" ಅಂತಿದ್ರು ಸಾವ್ಕಾರ್ರು"ಅಂದ.ಆವಾಗಾದ ಆಶ್ಚರ್ಯಕ್ಕೆ,ಸಂಭ್ರಮಕ್ಕೆ ಎಣೆ ಇರಲಿಲ್ಲ.ಕುತೂಹಲ ಅದುಮಿಟ್ಟುಕೊಳ್ಳಲಾಗದೆ ಕೇಳಿದೆ,ಎಲ್ಲಿಂದ ತರಿಸ್ತೀರಿ ನೀವಿದನ್ನ?ಅದಕ್ಕೆ ಅವನೆಂದ,"ನಮ್ಗೇನು ಗೊತ್ತು ಸಾರ್,ಎಲ್ಲಿಂದ ಬತ್ತದೆ ಅಂತ?ಮಾರ್ಕೆಟಿಗೆ ಬತ್ತದೆ ನಾವ್ ತತ್ತೀವಿ.ಈಗ ಒಳ್ಳೇ ಮಾರ್ಕೆಟ್ ಐತೆ ಸಾ..ಇದಕ್ಕೆ,ಸೀಸನ್ ಅಲ್ವಾ?"ನನಗೋ ಪಿಚ್ಚೆನಿಸಿದಂತಾಗಿ ಸುಮ್ಮನಾದೆ.ಆದರೂ ಮತ್ತೊಮ್ಮೆ ದೃಷ್ಟಿ ಅದರ ಮೇಲೆ ಹಚ್ಚಿದ್ದ ಸ್ಟಿಕ್ಕರ್ ಮೇಲೆ ಹೋಯಿತು.ಮತ್ತೆ ಕೇಳಿದೆ,ಸ್ಟಿಕ್ಕರ್ ಯಾಕಯ್ಯಾ ಹಚ್ತೀರಿ?ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿದ ಆತ ಹೇಳಿದ,"ಬ್ರಾಂಡ್ ನೇಮು ಸಾ..ಸುಮ್ನೆ ತಂದಿಟ್ಕೊಂಡ್ರೆ ಜನಾ,ಜ್ಯೂಸ್ ಅಂಗಡಿಯೋರು ಒಯ್ತಾರ?ಕ್ವಾಲಿಟಿ ಇಂಪೊರ್ಟೆಂಟು ಸಾ.."ಯಾಕೋ ಗೊತ್ತಿಲ್ಲ,ಸರಕ್ಕನೇ ನನ್ನ ಕೊರಳಪಟ್ಟಿಯನ್ನು ಜೇಬಿಗಿಳಿಸಿಕೊಂಡು ಜ್ಯೂಸನ್ನು ಕೈಗೆತ್ತಿಕೊಳ್ಳಲು ನಡೆದೆ.

ಜ್ಯೂಸ್ ಕುಡಿಯುತ್ತಿದ್ದಂತೆ ಕಣ್ಣ ಮುಂದೆ ಬರೀ ಬೆಣ್ಣೆಹಣ್ಣುಗಳದ್ದೇ ಚಿತ್ರ.ಎಲ್ಲಿ ನೋಡಿದರೂ ಬೆಣ್ಣೆಹಣ್ಣುಗಳು.ಅದೂ ಒಂದೇ ಆಕಾರದ,ಒಂದೇ ರೀತಿಯ,ಹಸಿರು,ನಸು ಹಳದೀ ಬಣ್ಣದ ಹಣ್ಣುಗಳು.ಎಲ್ಲ ಬೆಣ್ಣೆಹಣ್ಣುಗಳ ಮೇಲೂ ಕೆಂಪು,ನೀಲಿ,ಗುಲಾಬಿ ಬಣ್ಣದ ಸ್ಟಿಕ್ಕರ್ ಗಳು.ಕಾಲೇಜಿನ ಎಂಟ್ರನ್ಸಿನಿಂದ ಉರುಳಿ,ಉರುಳಿ ಬರುತ್ತಿರುವ ಹಣ್ಣುಗಳು.ಬಸ್ ಸ್ಟಾಪಿನಲ್ಲೂ ಅವುಗಳದೆ ಸಾಮ್ರಾಜ್ಯ.ಅರೇ,ಇದೇನಿದು?ರಸ್ತೆಯಲ್ಲಿ ಹೋಗುತ್ತಿರುವ ಪ್ರತಿ ಕಾರಿನಲ್ಲೂ,ಬೈಕಿನ ಮೇಲೂ,ಬಸ್ಸಿನ ತುಂಬೆಲ್ಲ ಬೆಣ್ಣೆಹಣ್ಣುಗಳೆ.ಸ್ಟಿಕ್ಕರ್ ಗಳ ಬಣ್ಣ ಮಾತ್ರ ಬೇರೆ.ನಾನು ಕುಡಿಯುತ್ತಿರುವ ಬೆಣ್ಣೆಹಣ್ಣಿನ ಜ್ಯೂಸು ಎಷ್ಟು ಕುಡಿದರೂ ಖಾಲಿಯಾಗುತ್ತಿಲ್ಲ.ಕುಡಿಯಲಾಗದೆ ಹಾಗೆ ಉಳಿಸಿದ ಜ್ಯೂಸಿನ ಗ್ಲಾಸನ್ನು ಪಕ್ಕದಲ್ಲಿರಿಸಿ,ಅಂಗಡಿಯಾತನಿಗೆ ಹಣ ಕೊಡಲು ಬಂದರೆ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು.ಆತನ ಆಂಗಡಿಯಲ್ಲಿ ಬೆಣ್ಣೆಹಣ್ಣನ್ನು ಹೊರತುಪಡಿಸಿ ಉಳಿದ ಹಣ್ಣುಗಳೊಂದೂ ಕಾಣಿಸುತ್ತಿಲ್ಲ.ಅಂಗಡಿಗೆ ಬಂದವರೆಲ್ಲರೂ ಕೇಳುತ್ತಿರುವದು ಬೆಣ್ಣೆಹಣ್ಣಿನ ಜ್ಯೂಸನ್ನೊಂದೇ.ಆತನ ಅಂಗಡಿಯಲ್ಲಿ,ಬೇರೆ ಯಾವ ಹಣ್ಣಿನ ಜ್ಯೂಸಿಗೂ ಅಸ್ತಿತ್ವವೇ ಇಲ್ಲದಾಗಿದೆ.ಇಷ್ಟು ಶೀಘ್ರವಾಗಿ,ಒಂದೇ ಅಭಿರುಚಿಯಿರುವ ಇಷ್ಟೊಂದು ಜನರ ಜಾತ್ರೆಯನ್ನು ಕಂಡು ನಾನು ಕಂಗಾಲಾಗಿ ಹೋದೆನು."ಒಳ್ಳೇ ಮಾರ್ಕೆಟೈತೆ ಸಾರ್,ಸೀಸನ್ ಟೈಮು,ಬಿಸಿನೆಸ್ಸೂ ಚೆನ್ನಾಗೈತೆ" ಎಂದ ಅಂಗಡಿಯಾತನ ಮಾತೇ ಪದೇ,ಪದೇ ಪ್ರತಿದ್ವನಿಸಿದಂತಾಗಿ,ಬವಳಿ ಬಂದಂತಾಗಿ ಅಲ್ಲೇ ಇದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಸಿದು ಕುಳಿತೆ.

7 comments:

Sudheer said...

Nice post.. Did you post it any other prominent kannada magazine before ...???

ಶಾಂತಲಾ ಭಂಡಿ (ಸನ್ನಿಧಿ) said...

ಗೆಂಡೆತಿಮ್ಮ...
ಬೆಣ್ಣೆಹಣ್ಣಿನ ಗಿಡದ ನಿರಾಸೆಯ ಕತೆ....ಸುಂದರ ವರ್ಣನೆ.
ಯಮ್ಮನೆ ಹಿತ್ಲಕಡಿಗೆ ಒಂದು ಬೆಣ್ಣೆಹಣ್ಣಿನಗಿಡ ಇದ್ದು, ಅದೂ ಸಹ ನನ್ನ ಜೊತೆನೇ ಬೆಳ್ದು ನೀ ಬರೆದ ಕಥೆನೇಯ....
ಅಮ್ಮ ಅಜ್ಜರ ಬೆಣ್ಣೆಹಣ್ಣಿನ ಕ್ರೀಮಿನಂತ ವರ್ಣನೆ ಕನಸಾಗೇ ಹೋತು.:(
ನಾನೂ ಸಹ ಬೆಂಗಳೂರಿನಲ್ಲಿ ಜ್ಯೂಸ್ ಅಂಗಡಿಯೊಂದರಲ್ಲಿ ಕಂಡ ಆ ಹಣ್ಣನ್ನ ಖರೀದಿಸಿ ತಂದು ರುಚಿ ನೋಡ್ದಾಗ ನಂಗೆ ನಿರಾಸೆ:(
ಅಪ್ಪ ಹೇಳಿದಂಗೆ ಆ ಹಣ್ಣು ಕ್ರೀಮಿನಂಗೆ ಇತ್ತು. ಆದ್ರೆ ನನ್ನ ಕನಸಿನ ಸಿಹಿ ಆ ಹಣ್ಣಲ್ಲಿ ಇತ್ತಿಲ್ಲೆ. :(

Seema S. Hegde said...

ತುಂಬಾ ಚೆನ್ನಾಗಿದೆ.
ಬರವಣಿಗೆಯೂ ಅದ್ಭುತ. ಹಾಂ, ಇನ್ನೊಂದು ವಿಷಯ...
ಊರಲ್ಲಿ ಪುಕ್ಕಟೆಯಾಗಿ ಸಿಗುತ್ತಿದ್ದ ವಸ್ತುಗಳನ್ನು ಲಕ್ಷಿಸದಿದ್ದರೂ ಅವುಗಳು ಸ್ಟಿಕರ್ ಹಚ್ಚಿಕೊಂಡು ಕುಳಿತ ಕೂಡಲೇ ಕೊಂಡುಕೊಳ್ಳುತ್ತೇವೆ ಅಲ್ವಾ?
ಊರಲ್ಲಿದ್ದಾಗ ಹಲಸಿನ ಕಾಯಿ ಮರದಲ್ಲೇ ಹಣ್ಣಾಗಿ ಉದುರಿ ಬಿದ್ದರೂ ಮಾತನಾಡಿಸುತ್ತಿರಲಿಲ್ಲ.
ಆದರೆ ಬೆಂಗಳೂರಿನಲ್ಲಿ ಹಲಸಿನ ಹಣ್ಣಿಗೆ ನಾನು ದುಡ್ಡು ಕೊಟ್ಟು ತಿಂದೂ ಆಗಿದೆ!

ಕೆನೆ Coffee said...

ಒಳ್ಳೆ ಲೇಖನ.
ಬೆಂಗಳೂರಿನ ಹಣ್ಣು, ತರಕಾರಿಗೆ ಅಪ್ಪ,ಅಮ್ಮನ ವಾಗತೀಲಿ ಬೆಳೆದ ರುಚಿ ಬರಲೇ ಸಾದ್ಯನೇ ಇಲ್ಲೆ.
ದುಡ್ಡುಕೊಟ್ಟು ಪೇರಳೆ ಹಣ್ಣು ತಿನ್ನಕಾದ್ರೆ ಪ್ರತಿಸಲನು ನಂಗೂ ಹಿಂಗೇ ಅನಸ್ತು. :(

ವಿ.ರಾ.ಹೆ. said...

ಇದನ್ನ ’ಓ ಮನಸೇ’ನಲ್ಲಿ ಓದಿದ ನೆನಪು. right?

ಗೆಂಡೆತಿಮ್ಮ said...

ಮನಸ್ಸಿನಿಂದ ಬಂದು,"ಓ ಮನಸೇ " ಮುನಿಸಿಕೊಲ್ಲೋದಕ್ಕಿಂತಾ ಮೊದಲು ಪ್ರಕಟವಾಗಿದ್ದಂತೂ ಹೌದು .

Asha said...

Maani cholo baradde...
kannadadalli convert maadale bejaaratu adakke eng-nnada atu..